Pages

Monday, October 31, 2011


"ಅಂಧತ್ವ''

ಸೂರ್ಯಾಸ್ತದ ಆ ಹೊತ್ತು
ಬಾನೆಲ್ಲ ಕೆಂಪೇರಿ

ನೀಲಿ ಮೋಡಗಳು ಚದುರಿ

ಭುವಿಯೆಲ್ಲ ಮಬ್ಬಾಗಿ

ಬದಲಾವಣೆಗೆ ಒಗ್ಗಿಕೊಳ್ಳುವಾಗ

ಇಲ್ಲಿ

ಹಕ್ಕಿ ಪಕ್ಷಿಗಳೆಲ್ಲ ಗೂಡು ಸೇರುವ

ಆ ಘಳಿಗೆ

ನಿತ್ಯ ಕಾಯಕ ಮುಗಿಸಿ

ಮನೆಯತ್ತ ಹೆಜ್ಜೆ ಹಾಕುವ ಮಂದಿ

ಮತ್ತೆ ಮುಂಜಾವಿನವರೆಗೆ

ವಿಶ್ರಾಂತಿ ಬಯಸುವ ದೇಹ

ಆ ಸಮಯದಲ್ಲೂ

ಕನ್ನಡಿ ಮುಂದೆ ನಿಂತು

ತಿದ್ದಿ ತೀಡಿಕೊಳ್ಳುವ ಬಯಕೆ

ಸೌಂದರ್ಯದ ಸುಳ್ಳೇ ಕಾಳಜಿ ಕಂಡು

ಬೋಳಾದ ಮರ

ಮತ್ತೆ ಮತ್ತೆ ಮನುಷ್ಯನತ್ತ

ನೋಡಿ ನಗುತ್ತಿದೆ

ನಗುತ್ತ ಹೇಳುತ್ತಿದೆ

ನೀ

ಎಷ್ಟೇ ಎಚ್ಚರ ವಹಿಸಿದರು

ಒಂದಿಲ್ಲೊಂದು ದಿನ

ನನ್ನಂತೆ ಆಗಲೇಬೇಕು

ಬದಲಾವಣೆಗೆ

ಒಗ್ಗಿಕೊಳ್ಳಲೇಬೇಕು

ಆದರು ನಿನಗ್ಯಾಕೆ

ಈ ಹುಚ್ಚು ಸೌಂದರ್ಯದ ಭ್ರಮೆ ..?

ಇದಕ್ಕಿಂತ

ನಿನ್ನ ನಡೆ ನುಡಿಯಲ್ಲಿರಲಿ

ಸೌಂದರ್ಯ

ಬದುಕುವ ರೀತಿಯಲ್ಲಿರಲಿ

ಸೌಂದರ್ಯ

ಮತ್ತೊಬ್ಬರಿಗೆ ನೀಡುವ ನೆರವಿನಲ್ಲಿರಲಿ

ಸೌಂದರ್ಯ

ಮನಸ್ಸು ಕುರೂಪಿಯಾದರು

ದೇಹ ಸೌಂದರ್ಯಕ್ಕೆ ಒತ್ತುಕೊಡುವೆಯಲ್ಲ

ನಾನಾದರೂ

ಮತ್ತೆ ಬೆಳಗಾಗಿ

ಮಾಸ ಬದಲಾದಾಗ

ಚಿಗುರೊಡೆದು ಮಂದಿಗೆ ನೆರಳ ನೀಡಿ

ಉಸಿರಿಗೆ ಗಾಳಿ ನೀಡುವೆನು

ಆದರೆ

ನಿನಗೆ ಮತ್ತೆ ಮತ್ತೆ

ಆ ಅವಕಾಶವಿಲ್ಲ

ಇರುವ ಒಂದೇ ಜನ್ಮವನ್ನು

ಸಾರ್ಥಕ ಪಡಿಸಿಕೊಳ್ಳದೆ

ಏಕೆ ನಿರರ್ಥಕವಾಗಿ ಕಳೆಯುತ್ತಿರುವೆ

ಲೌಕಿಕದ ಈ ಭ್ರಮೆಗಿಂತ

ಪರಿಪೂರ್ಣತೆಯ ಸುಖದಲ್ಲಿ ಮಿಂದೆದ್ದು

ನಿನ್ನ ಬದುಕನ್ನು

ಅರ್ಥಪೂರ್ಣವಾಗಿಸಿಕೋ ...

ಈ ಅಂಧತ್ವ ಹೋಗಲಾಡಿಸಿಕೊಂಡು

ಬೆಳಕಿನತ್ತ ಮುಖ ಮಾಡಿ

ಎಲ್ಲರೂ ನನ್ನವರೆಂದು ಭಾವಿಸು

ಆಗ ಆಗುತ್ತಿಯೇ ನೀ ನಿಜವಾದ ಮಾನವ ...!!!

-ಹೆಚ್. ಆರ್. ಪ್ರಭಾಕರ್.

No comments:

Post a Comment